ಕಾರ್ಕಳದಲ್ಲಿ ಯಕ್ಷಕಲಾರಂಗದ ಯಕ್ಷೋತ್ಸವ
ಲೇಖಕರು : ಉದಯವಾಣಿ
ಭಾನುವಾರ, ಮಾರ್ಚ್ 30 , 2014
|
ಮಾರ್ಚ್ 30, 2014
|
ಕಾರ್ಕಳದಲ್ಲಿ ಯಕ್ಷಕಲಾರಂಗದ ಯಕ್ಷೋತ್ಸವ
ಕಾರ್ಕಳ :
ಯಕ್ಷಗಾನ ಕಲೆಯ ಬಗ್ಗೆ ಎಳೆಯರಲ್ಲಿ ಆಸಕ್ತಿ ಮೂಡಿಸಬೇಕು ಎನ್ನುವ ಸದುದ್ದೇಶದಿಂದ ಕಾರ್ಕಳದ ಪ್ರೊ| ಪದ್ಮನಾಭ ಗೌಡರು ಸಮಾನಮನಸ್ಕ ಸ್ನೇಹಿತ ರೊಂದಿಗೆ ಕಾರ್ಯಪ್ರವೃತ್ತರಾಗಿ ಕಾರ್ಕಳದಲ್ಲಿ ಯಕ್ಷಕಲಾರಂಗ ವನ್ನು ಕಟ್ಟಿದ್ದಾರೆ. ಇದರ ಆಶ್ರಯದಲ್ಲಿ ಮೊದಲ ವರುಷ ಸುಮಾರು ಹತ್ತು ಪ್ರಾಥಮಿಕ ಶಾಲೆಗಳಲ್ಲಿ ಯಕ್ಷಗಾನ ಗುರುಗಳನ್ನು ನಿಯೋಜಿಸಿ, ಯಕ್ಷಗಾನಾಸಕ್ತ ವಿದ್ಯಾರ್ಥಿ ಗಳಿಗೆ ತರಬೇತಿ ಆರಂಭಿಸಲಾಯಿತು. ತರಬೇತಿ ಪಡೆದ ಮಕ್ಕಳಿಂದ ವರ್ಷಾಂತ್ಯದಲ್ಲಿ ಯಕ್ಷೋತ್ಸವ ನಡೆಸುವಂತಾಯಿತು. ಕಾರ್ಕಳದಲ್ಲಿ ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮ ಭರವಸೆಯ ಮಂದಹಾಸ ಮೂಡಿಸಿತ್ತು.
ಇದು ಯಕ್ಷಕಲಾರಂಗಕ್ಕೆ ದ್ವಿತೀಯ ವರ್ಷ. ಈ ವರ್ಷದಲ್ಲಿ ಯಕ್ಷಗಾನಕ್ಕೆ ಸಂಬಂಧಪಟ್ಟು ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡಬೇಕೆಂಬ ಗುರಿಯನ್ನು ಇರಿಸಿ ಕೊಂಡ ಸಂಸ್ಥೆ ಪ್ರಸಿದ್ಧ ಅರ್ಥಧಾರಿಗಳಿಂದ ತಾಳಮದ್ದಳೆ, ಪೆರ್ಡೂರು ಮೇಳದಿಂದ ಯಕ್ಷಗಾನ ಬಯಲಾಟ ಏರ್ಪಡಿಸಿತ್ತು ಹಾಗೂ ಆಸಕ್ತ ಮಹಿಳೆಯರಿಗೆ ತಾಳ ಮದ್ದಳೆಯ ತರಬೇತಿ ನೀಡಿತು. ಪ್ರಪ್ರಥಮ ಬಾರಿಗೆ ಕಾರ್ಕಳದಲ್ಲಿ ಮಹಿಳೆಯರೂ ಯಕ್ಷಗಾನ ತಾಳಮದ್ದಳೆ ಮಾಡುವಂತಾಯಿತು. ಈ ಸದಸ್ಯೆಯರು ಕೆಲವೇ ಕಾಲ ದಲ್ಲಿ ಒಂಬತ್ತು ತಾಳಮದ್ದಳೆ ಕೂಟಗಳನ್ನು ನಡೆಸಿಕೊಟ್ಟರು. ಇವರೆಲ್ಲ ಯಕ್ಷಕಲಾರಂಗದ ಸದಸ್ಯೆಯರೆಂಬುದು ಹೆಮ್ಮೆ.
ಯಕ್ಷಕಲಾರಂಗದ ಪದಾಧಿಕಾರಿಗಳ ಸ್ಫೂರ್ತಿ, ಸಂಚಾಲಕರಾದ ಪ್ರೊ| ಗೌಡರ ಉತ್ತೇಜನದೊಂದಿಗೆ ಎರಡನೇ ವರುಷದಲ್ಲೂ ಎರಡು ದಿನಗಳ "ಯಕ್ಷೋತ್ಸವ' ಅತ್ಯುತ್ತಮವಾಗಿ ಮೂಡಿಬಂತು. ಯಕ್ಷಗಾನ ಕಲಾವಿದ, ಅರ್ಥಧಾರಿ ದಿ| ಕೆ. ಶ್ಯಾಮ ಶೆಟ್ಟಿ ವೇದಿಕೆಯಲ್ಲಿ ಒಂಬತ್ತು ಶಾಲೆಗಳ ಸುಮಾರು ಇನ್ನೂರ ಹತ್ತು ಮಕ್ಕಳು ಯಕ್ಷಗಾನ ಪ್ರದರ್ಶನ ನೀಡಿದರು. ಯಕ್ಷಗಾನ ಕಲೆಯನ್ನು ಎಳವೆಯಲ್ಲೇ ಆಸಕ್ತಿ ಮೂಡಿಸಿ, ಪ್ರೋತ್ಸಾಹಿಸಿ ಕಲೆಯನ್ನು ಉಳಿಸುವ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ. ಗ್ರಾಮಾಂತರ ಪ್ರದೇಶಗಳ ಮಕ್ಕಳಿಗೆ ಯಕ್ಷಗಾನ ನಾಟ್ಯ, ಮಾತುಗಾರಿಕೆ ಕಲಿಸಿ ಪ್ರದರ್ಶನ ಮಾಡಿಸಿರುವುದು ಮೆಚ್ಚುವಂತಹುದು. ತರಬೇತಿ ಪಡೆದ ಕೆಲವು ಮಕ್ಕಳ ಹಾವ-ಭಾವ, ಕುಣಿತ, ಮುದ್ರೆ, ಗತ್ತು, ನಡೆ-ನುಡಿ ಗಮನಿಸಿದರೆ, ಇವರು ಇದೇ ಆಸಕ್ತಿಯನ್ನು ಮುಂದೆಯೂ ಉಳಿಸಿಕೊಂಡಲ್ಲಿ ಉತ್ತಮ ಯಕ್ಷಗಾನ ಕಲಾವಿದರಾಗಿ ಮೂಡಿಬರುವುದರಲ್ಲಿ ಸಂದೇಹವಿಲ್ಲ ಎನ್ನುವ ಭರವಸೆ ಮೂಡುತ್ತದೆ. ಯಕ್ಷಕಲಾರಂಗದ ಈ ಸಾಧನೆಯ ಹಿಂದೆ ಪ್ರಾಯೋಜಕರಾಗಿ ನೆರವಿನ ಹಸ್ತ ಚಾಚಿದವರು ಹಲವರು.
ಉತ್ತಮ ಆಶಯ, ಒಳ್ಳೆಯ ಉದ್ದೇಶದೊಂದಿಗೆ ಈಗ ತಾನೇ ಮೊಳಕೆ ಒಡೆದು ಗಿಡವಾಗಿರುವ ಈ ಯಕ್ಷಕಲಾ ರಂಗ ಬೆಳೆಯಲಿ, ಯಕ್ಷಪ್ರೇಮಿಗಳಿಗೆ ನೆರಳನ್ನು ನೀಡಲಿ ಎಂಬುದು ಸದಾಶಯ.
ಕೃಪೆ :
http://www.udayavani.com
|
|
|